ಕಾವ್ಯ ಸ್ರಷ್ಟಿಯ ಅಸ್ತಿತ್ವವನ್ನು ಅದು ಒಳಗೊಳ್ಳುವ ಭಾಷಿಕ ಸಾಮಗ್ರಿಯ ಕೇಂದ್ರದಿಂದ ನಿರ್ವಚಿಸುವ ಪ್ರಯತ್ನವು ಅದರ ಸಾಮಾಜಿಕ
ವ್ಯಕ್ತಿತ್ವವನ್ನು ಕಟ್ಟಿಕೊಡಲು ಅತ್ಯವಷ್ಯವಾದುದೆ ಆಗಿದೆ.ಆದರೆ ಕಾವ್ಯದ ಅಸ್ತಿತ್ವದ ಆಲೋಚನೆಯನ್ನು ನಾವು ಇನ್ನೊಂದು ದಿಕ್ಕಿನಿಂದ
ಪ್ರವೇಶಿಸುವ ಅಗತ್ಯವೂ ಇದೆ.ಮನುಷ್ಯನ ಬಾಳಿನ ಒಟ್ಟೂ ಚಲನೆಯಲ್ಲಿ ಈ ಕಾವ್ಯವೆಂಬ ಮಾಧ್ಯಮವು ವಹಿಸುವ ಪಾತ್ರವೇನು
ಎಂಬುದು ಈ ಬಗೆಯ ಚಿಂತನೆಗೆ ಮಿಟುಗೊಲಾಗಿ ನಮ್ಮನ್ನು ತನ್ನತ್ತ ಸೆಳೆದುಕೊಳ್ಳುತ್ತದೆ.
ಬುದ್ಧ ತನ್ನ ಆರ್ಯ ಸತ್ಯಗಳ ಮೂಲಕ ಒಂದು ಮಹತ್ವದ ಮಾತಿನತ್ತ ನಮ್ಮ ಲಕ್ಷ ಸೆಳೆಯುತ್ತಾನೆ.ಆತ ಹೇಳುವಂತೆ ಜೀವನವು
ದುಖಮಯವಾಗಿದೆ ಎಂದು ಒಪ್ಪಿದಾಗ ಮಾತ್ರ ಮನುಷ್ಯನಿಗೆ ಧರ್ಮದ ಅವಶ್ಯಕತೆ ಇದೆ ಎಂದು ನಾವು ಒಪ್ಪಬಹುದಾಗಿದೆ.ಹಾಗೆ ಒಪ್ಪಿದಾಗ ಮಾತ್ರ ನಿಜವಾದ ಧರ್ಮವೆಂದರೇನು?ಅದರತ್ತ ಚಲಿಸುವ ಬಗೆ ಏನು?ಇತ್ಯಾದಿ ಪ್ರಶ್ನೆಗಳೆಲ್ಲ ಮುಖ್ಯವಾಗುತ್ತವೆ.
ಧರ್ಮವೆಂಬ ಮಹಾ ಪಥಕ್ಕೆ ನಮ್ಮನ್ನು ಒಯ್ದು ತಲುಪಿಸುವ ಕಿರುದಾರಿಯಾಗಿ ನಮ್ಮ ಎಲ್ಲ ಕಲೆಗಳ ಅಸ್ತಿತ್ವವನ್ನೂ ನಾವು ಅನಾದಿ ಕಾಲದಿಂದಲೂ ಪರಿಭಾವಿಸುತ್ತ ಬಂದಿದ್ದೇವೆ.ಹೀಗಾಗಿ ಧರ್ಮದ ಬಗೆಗಿನ ನಮ್ಮ ಚಿಂತನೆಗಳು ಪರೊಕ್ಷವಾಗಿ ಕಲೆಯ ಬಗೆಗಿನ ಚಿಂತನೆಗಲಾಗಿಯೂ ಪರಿವರ್ತಿತವಾಗುತ್ತವೆ.
No comments:
Post a Comment